ಪ್ರಸಾದ ಭಗವಂತನ ಸ್ವರೂಪ : ಡಾ.ಚನ್ನಬಸವ ಶಿವಾಚಾರ್ಯರು
ಕೇವಲ ಭಾರತ ಮಾತ್ರವಲ್ಲದೆ ಇಡೀ ವಿಶ್ವದಾದ್ಯಂತ ಇರುವ ಎಲ್ಲಾ ಮುಸ್ಲಿಂ ಭಾಂದವರು ಒಂದು ತಿಂಗಳ ಕಾಲ ಕಟ್ಟುನಿಟ್ಟಾಗಿ ಉಪವಾಸ ಆಚರಿಸುವ ಹಬ್ಬ ರಂಜಾನ್. ಈ ಹಬ್ಬ ಪ್ರತಿಯೊಬ್ಬ ಮುಸಲ್ಮಾನನಿಗೂ ಮಹತ್ವಪೂರ್ಣ ಹಬ್ಬ ಅದಕ್ಕಾಗಿ ಈ ಸಂದರ್ಭದಲ್ಲಿ ಏರ್ಪಡಿಸುವ ಇಫ್ತಿಹಾರ ಕೂಟ ಬಹಳ ವಿಶೇಷ. ಕಂದಗಲ್ಲ ಗ್ರಾಮದ ನಿಹಾರಿಕ ಗ್ರಾಮೀಣಾಭಿವೃದ್ಧಿ ಸಂಘದವರು ಸತತವಾಗಿ ೬ನೇ ವರ್ಷ ಇದೇ ಜಾಮಿಯಾ ಮಸ್ಜಿದ್ ಆವರಣದಲ್ಲಿ ಇಫ್ತಿಹಾರ ಕೂಟ ಏರ್ಪಡಿಸುತ್ತಾ ಬಂದಿದ್ದು, ಗ್ರಾಮದಲ್ಲಿನ ಹಿಂದು – ಮುಸ್ಲಿಂ ಭಾವೈಕ್ಯತೆ ಬೆಸೆಯುವ ಕೊಂಡಿಯಾಗಿ ಕೆಲೆಸ ಮಾಡುತ್ತಿದ್ದು ಶ್ಲಾಘನೀಯ ಎಂದು ನಂದವಾಡಗಿಯ ಮಹಾಂತೇಶ್ವರ ಮಠದ ಡಾ.ಷ.ಬ್ರ ಅಭಿನವ ಚನ್ನಬಸವ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಕಂದಗಲ್ಲ ಗ್ರಾಮದ ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಘ ಹಾಗೂ ಅಂಜುಮನ್ ಇಸ್ಲಾಂ ಕಮಿಟಿಯವರ ಸಹಯೋಗದೊಂದಿಗೆ ಜಾಮಿಯಾ ಮಸ್ಜಿದ್ ಆವರಣದಲ್ಲಿ ನಡೆದ ಇಫ್ತಿಹಾರ ಕೂಟವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಅದರು ಪ್ರಸಾದ ಭಗವಂತನ ಸ್ವರೂಪ ಅದನ್ನು ವ್ಯರ್ಥ ಮಾಡದೇ ಅವಶ್ಯಕತೆಗೆ ತಕ್ಕಂತೆ ನೀಡಿಸಿಕೊಂಡು ಸೇವಿಸಬೇಕು ಎಂದು ಅವರು ಹೇಳಿದರು.
ಸಂಸ್ಥೆಯ ಅಧ್ಯಕ್ಷ ವಿ. ಬಿ ಜೀರಗಿ ಗುರುಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮದ ಕುರಿತು ರಾಮನಗೌಡ ಸಂದಿಮನಿ ಗುರುಗಳು ಹಾಗೂ ಮೊಹಮದಲಿ ಯತ್ನಟ್ಟಿ ಗುರುಗಳು ಉಪನ್ಯಾಸ ನೀಡಿದರು. ಅಂಜುಮನ ಇಸ್ಲಾಂ ಕಮಿಟಿ ಅಧ್ಯಕ್ಷರಾದ ಮೊಹಮ್ಮದ್ ಸಾಬ್ ಬಾವಿಕಟ್ಟಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಅತಿಥಿಗಳಾಗಿ ಉಮೇಶ್ ಕಂಠಿ, ಚನ್ನಪ್ಪ ಜಾಲಿಹಾಳ, ಬಸೆಟೆಪ್ಪ ಸಜ್ಜನ, ಡಾ. ಮಲ್ಲಿಕಾರ್ಜುನ್ ಗಡಿಯಣ್ಣವರ, ಸಂತೋಷ್ ಮ್ಯಾಗಡಿ, ವಿನಾಯಕ ಹಡಪದ, ಯಂಕಣ್ಣ ಮಳ್ಳಿ ಉಪಸ್ಥಿತರಿದ್ದರು.
ಸಂಸ್ಥೆಯ ಸಂಸ್ಥಾಪಕರಾದ ಡಾ.ಸಂತೋಷ್ ಪೂಜಾರಿ ಪ್ರಸ್ತಾವಿಕವಾಗಿ ಮಾತನಾಡಿದರು. ಮೌಲಾನ ಇಸ್ಮಾಯಿಲ್ ಸಾಬ್ ಮುಲ್ಲಾ ಇವರ ಕುರಾನ್ ಪಠಣದೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಉಸ್ಮಾನ ಜನಾಬ ಬಾಗವಾನ ಅವರ ಉಪವಾಸ ತ್ಯಜಿಸುವ ಪ್ರಾರ್ಥನೆಯೊಂದಿಗೆ ಮುಕ್ತಾಯವಾಯಿತು. ಪ್ರಶಾಂತ ಬನ್ನಿಗೋಳ ಸ್ವಾಗತಿಸಿದರು, ರಾಜು ಪರಾಸರ ವಂದಿಸಿದರು, ವೀರೇಶ ಶಿಂಪಿ ಕಾರ್ಯಕ್ರಮ ನಿರೂಪಿಸಿದರು. ಗ್ರಾಮದ ಹಿಂದೂ – ಮುಸ್ಲಿಂ ಬಾಂಧವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.