Gokarna ಕಡಲಬ್ಬರಕ್ಕೆ ಕೊಚ್ಚಿಹೋದ ಕಡಲತೀರ:ಕ್ಯಾರೇ ಅನ್ನುತ್ತಿಲ್ಲ ಪ್ರವಾಸಿಗರು
ಮಳೆಯ ಜೊತೆಗೆ ಕಡಲಬ್ಬರ : ಅಪಾಯದ ಕಡಲಿನಲ್ಲಿಯೂ ಮೋಜು ಮಾಡುವ ಪ್ರವಾಸಿಗರು
ಗೋಕರ್ಣ : ಕಳೆದೆರಡು ದಿನಗಳಿಂದ ಕಡಿಮೆಯಾಗಿದ್ದ ಮಳೆಯ ಆರ್ಭಟ ಶುಕ್ರವಾರ ಮತ್ತೆ ಅಬ್ಬರಿಸಿದೆ. ಮಳೆಯ ತೀವೃತೆ ಕಡಲಬ್ಬರದಿಂದಾಗಿ ಇಲ್ಲಿಯ ಪ್ರಮುಖ ಕಡಲ ತೀರವನ್ನೇ ಸಮುದ್ರ ನುಂಗಿ ಹಾಕಿದೆ. ವಿಶಾಲವಾಗಿದ್ದ ಕಡಲತೀರ ಈಗ ಸಂಪೂರ್ಣ ಅಯೋಮಯವಾಗಿದೆ.
ದಕ್ಷಿಣದ ಕಾಶಿಯೆನಿಸಿಕೊಂಡಿರುವ ಗೋಕರ್ಣಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಿದ್ದರು. ಹಾಗೇ ದರ್ಶನವಾದ ನಂತರ ಸಮೀಪದಲ್ಲೇ ಇರುವ ಪ್ರಮುಖ ಕಡಲತೀರಕ್ಕೆ ಬಂದು ಹೋಗುವುದು ಸಂಪ್ರದಾಯ ಎನ್ನುವಂತಾಗಿದೆ. ಹಾಗೇ ಶುಕ್ರವಾರ ಸಮುದ್ರದ ತೀರವನ್ನು ನೋಡಿದರೆ ಹತ್ತಾರು ಎಕರೆಯಷ್ಟು ಪ್ರದೇಶದಲ್ಲಿನ ಮಣ್ಣನ್ನು ಅಲ್ಲಿಯ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ಕಡಲತೀರ ವಿರೂಪಗೊಂಡಿದೆ.
ಇಲ್ಲಿ ಸಾಕಷ್ಟು ಪ್ರಮುಖ ಬೀಚ್ಗಳಿದ್ದರೂ ಕೂಡ ಶ್ರೀ ಮಹಾಬಲೇಶ್ವರ ದೇವಸ್ಥಾನದ ಕಡಲತೀರ ಅತ್ಯಂತ ಸಮೀಪವಾಗಿರುವುದರಿಂದ ಭಕ್ತರು ಇಲ್ಲಿಗೆ ಬಂದು ಸಮುದ್ರಸ್ನಾನ ಮಾಡುವುದು, ಪಿಂಡಪ್ರದಾನ ಮಾಡುವುದು ಹಾಗೂ ವಿವಿಧ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದ್ದರು. ಆದರೆ ಈಗ ಕಡಲತೀರವೇ ಇಲ್ಲ ಎಂಬoತಾಗಿದೆ.
ಎಚ್ಚರಿಕೆ ನೀಡಿದರೂ ಕೂಡ ಕ್ಯಾರೇ ಅನ್ನುತ್ತಿಲ್ಲ ಪ್ರವಾಸಿಗರು
ಇನ್ನು ಹೊರಗಡೆಯಿಂದ ಬರುವ ಭಕ್ತರಿಗೆ ಇಲ್ಲಿಯ ಸಮುದ್ರದ ಆಳ ಮತ್ತು ತೀವೃತೆಯ ಬಗ್ಗೆ ಅರಿವು ಇಲ್ಲದಿರುವುದರಿಂದ ಸಮುದ್ರದ ಅಬ್ಬರದ ನಡುವೆಯೂ ಸಮುದ್ರ ಸ್ನಾನಕ್ಕೆ ತೆರಳುತ್ತಿರುವುದನ್ನು ನೋಡಿದರೆ ನಿಜಕ್ಕೂ ಭಯ ಹುಟ್ಟಿಸುತ್ತದೆ. ಲೈಫ್ಗಾರ್ಡ್ಗಳು ಭಕ್ತರಿಗೆ ಪದೇ ಪದೇ ಎಚ್ಚರಿಕೆ ನೀಡಿದರೂ ಕೂಡ ಅವರು ಕ್ಯಾರೇ ಅನ್ನುತ್ತಿಲ್ಲ. ಒಮ್ಮೆಲೆ ನೀರು ಬಂದು ವಾಪಸ್ಸಾಗುವಾಗ ಸ್ವಲ್ಪ ಕಾಲು ತಪ್ಪಿದರೂ ನೀರು ಪಾಲಾಗುವ ಸಾಧ್ಯತೆಯಿದೆ.
ಪ್ರವಾಸಿಗರು ಕಡಲ ನೀರಿನಲ್ಲಿ ಮೋಜು
ಹಾಗೇ ಸಾಕಷ್ಟು ಕಡಲತೀರವನ್ನು ಕೊಚ್ಚಿಕೊಂಡು ಹೋಗಿದ್ದರೂ ಕೂಡ ಪ್ರವಾಸಿಗರು ಅದರಲ್ಲಿಯೂ ಮಹಿಳೆಯರು ನೀರಿನಲ್ಲಿ ಮೋಜು ಮಾಡುತ್ತಿರುವುದು ನೋಡಿದರೆ ನಿಜಕ್ಕೂ ಆತಂಕ ಹುಟ್ಟಿಸುತ್ತದೆ. ಲೈಫ್ಗಾರ್ಡ್ಗಳು ಎಚ್ಚರಿಕೆ ನೀಡುತ್ತಿದ್ದರೂ ಕೂಡ ಅವರು ತಲೆಗೆ ಹಾಕಿಕೊಳ್ಳದೇ ತಮ್ಮದೇ ಲೋಕದಲ್ಲಿದ್ದರು. ಇಂತಹ ಅಪಾಯದ ಸನ್ನಿವೇಶದಲ್ಲಿಯೂ ಕೂಡ ಸಮುದ್ರದಲ್ಲಿ ಮೋಜು ಮಾಡುತ್ತಿರುವುದು ನಿಜಕ್ಕೂ ಆತಂಕ ಹುಟ್ಟಿಸುತ್ತಿದೆ.
ದೂರದಿಂದ ಬರುವ ಭಕ್ತರಿಗೆ ದೇವರ ದರ್ಶನವಾದ ನಂತರ ಸಮುದ್ರದಲ್ಲಿ ಸ್ನಾನ ಮಾಡಬೇಕೆಂಬ ಸಹಜ ಬಯಕೆಯಂತೆ ತೆರಳುತ್ತಾರೆ. ಆದರೆ ಸ್ವಲ್ಪವೇ ಹೆಚ್ಚುಕಡಿಮೆಯಾದರೂ ಪ್ರಾಣ ಹೋಗುತ್ತದೆಂಬ ಕಿಂಚಿತ್ತು ಅಳಕಿಲ್ಲದೇ ನೀರಿನಲ್ಲಿ ಮೋಜು ಮಾಡುತ್ತಿರುವುದು ಎಂತವರಿಗಾದರೂ ಹುಚ್ಚಾಟ ಅನಿಸದೇ ಇರದು.






