Siddaganga Swamiji Dasoha ಸಿದ್ದಗಂಗಾ ಸ್ವಾಮೀಜಿ ದಾಸೋಹ ತತ್ವ ಜಗತ್ತಿಗೆ ಮಾದರಿ-ನಾಗಲೋಟಿ
ಇಲಕಲ್ : ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರು ತಮ್ಮ ಜೀವನದಲ್ಲಿ ದಾಸೋಹವನ್ನೇ ಉಸಿರಾಗಿಸಿಕೊಂಡಿದ್ದರು.ಅವರ ದಾಸೋಹದ ತತ್ವಗಳು ಇಂದಿಗೂ ಅನೇಕ ಜನರಿಗೆ ಪ್ರೇರಣೆಯಾಗಿದೆ ಎಂದು ಅಮ್ಮ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗುರುನಾಥಪ್ಪ ನಾಗಲೋಟಿ ಹೇಳಿದರು.
ನಗರದ ಅಮ್ಮ ಸೇವಾ ಸಂಸ್ಥೆಯಲ್ಲಿ ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆಯ ಅಂಗವಾಗಿ ಮಂಗಳವಾರ ದಾಸೋಹ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಡವರಿಗೆ ಸೇವೆ ನೀಡುವುದು ದೇವರ ಸೇವೆಯಷ್ಟೇ ಮಹತ್ವದ್ದು ಎಂದು ನಂಬಿದ್ದ ಸ್ವಾಮೀಜಿಯವರು ಜೀವನದಲ್ಲಿ ದಾಸೋಹ ಸೇವೆಯನ್ನು ತಮ್ಮ ಧರ್ಮವಾಗಿಟ್ಟುಕೊಂಡಿದ್ದರು. ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ ಜನ ಸಾಮಾನ್ಯರ ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಎಂಬ ಉದ್ದೇಶ ಹೊಂದಿದವರದ್ದಾಗಿದ್ದರು ಎಂದರು.
ಮುದ್ದೇಬಿಹಾಳದ ಪತ್ರಕರ್ತ ಶಂಕರ ಈ.ಹೆಬ್ಬಾಳ ಮಾತನಾಡಿ, ಮಕ್ಕಳ ಜನ್ಮದಿನ, ದಂಪತಿಗಳ ಮದುವೆ ವಾರ್ಷಿಕೋತ್ಸವ, ಸ್ನೇಹಿತರ ಜನ್ಮದಿನದ ಆಚರಣೆಯಲ್ಲಿ ದುಂದುವೆಚ್ಚ ಮಾಡದೇ ನಿರ್ಗತಿಕರಿಗೆ ಆಸರೆಯಾಗಿರುವ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಆಸರೆ ಪಡೆದವರಿಗೆ ಒಂದು ಹೊತ್ತಿನ ಸಿಹಿಯೂಟ ಮಾಡಿಸಿದರೆ ಅದಕ್ಕಿಂತ ದೊಡ್ಡ ತೃಪ್ತಿ ಬೇರೊಂದಿಲ್ಲ.ಹಿರಿಯರನ್ನು ಗೌರವದಿಂದ ಕಾಣುವ ಸಂಸ್ಕೃತಿಯನ್ನು ಯುವಕರು ಸಮಾಜಕ್ಕೆ ಇಂತಹ ಕಾರ್ಯಗಳ ಮೂಲಕ ನೀಡಬೇಕು ಎಂದರು.
ಸಂಸ್ಥೆಯ ಸದಸ್ಯರಾದ ಸುವರ್ಣಾ ಪಾಟೀಲ್, ಹೇಮಂತ ಮಿರಜಕರ, ನಾಗಪ್ಪ ಕರಡಕಲ್, ಗಂಗಣ್ಣ ಬಡಿಗೇರ, ರೈತ ಸಂಘದ ಜಿಲ್ಲಾಧ್ಯಕ್ಷೆ ನಿಂಗಮ್ಮ ಬೇವೂರ,ವಿಶ್ವ ದಾಸೋಹ ದಿನದ ಅಂಗವಾಗಿ ಪ್ರಸಾದ ವ್ಯವಸ್ಥೆಗೈದ ಈಶ್ವರಪ್ಪ ಹೆಬ್ಬಾಳ, ಭೋಜಪ್ಪ ಮಾರಾ, ಬಸವರಾಜ ರುದ್ರಗಂಟಿ, ಉಮಾ ಕಡ್ಲಿಮಟ್ಟಿ, ಗೋದಾವರಿ ರುದ್ರಗಂಟಿ, ಶಾಂತಮ್ಮ ಮಾರಾ, ಬಸಲಿಂಗಪ್ಪ ಬೇವೂರ ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.