ಅಗಲಿದ ಶಿಕ್ಷಕನ ಪ್ರತಿಮೆ ಮಾಡಿದ ಶಿಷ್ಯಂದಿರು !
ಇಳಕಲ್ : ಕಳೆದ ಮೇ ೧೭ ರಂದು ಹೃದಯಾಘಾತದಿಂದ ಹಠಾತ್ತನೆ ಅಗಲಿದ ಚಿತ್ರಕಲಾ ಶಿಕ್ಷಕ ಕಾಶೀಮ ಕನಸಾವಿಯವರ ಪ್ರತಿಮೆಯನ್ನು ಮಾಡಿ ಶಾಲೆಯಲ್ಲಿ ಅದನ್ನು ಪ್ರತಿಷ್ಠಾಪಿಸಲಾಗಿದೆ.
ಹೌದು , ಚಿತ್ರಕಲಾ ಶಿಕ್ಷಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದ ಕಾಶೀಮ ಕನಸಾವಿ ಈ ಭಾಗದಲ್ಲಿ ತಮ್ಮದೇ ಆದ ವಿಶೇಷ ಛಾಪು ಮೂಡಿಸಿದವರು.
ಕಾಶೀಮ ಆರ್ಟ ಗ್ಯಾಲರಿ ಮೂಲಕ ಉತ್ತರ ಕರ್ನಾಟಕದ ನೂರಾರು ಕಲಾವಿದರಿಗೆ ಪ್ರತಿಭೆ ಬೆಳಗಲು ಅವಕಾಶ ಮಾಡಿಕೊಟ್ಟವರು.
ತಾವು ಚಿತ್ರಿಸಿದ ಕಲಾಕೃತಿಗಳನ್ನು ದೂರದ ಮುಂಬಯಿಯಲ್ಲಿ ಪ್ರದರ್ಶನ ಮಾಡಿ ಮೆಚ್ಚುಗೆ ಗಳಿಸಿದವರು. ಇತರ ಮೂವರು ಮಿತ್ರರ ಜೊತೆಗೆ ಸೇರಿ ಐತಿಹಾಸಿಕ ಸ್ಥಳ ಹಂಪಿಯಲ್ಲಿ ಕಲಾಗ್ರಾಮ ನಿರ್ಮಿಸಿ ಚಿತ್ರನಟ ಶಂಕರನಾಗರAತೆ ಕನಸು ಕಂಡವರು.
ಆದರೆ ವಿಧಿ ಅವರ ಕನಸುಗಳಿಗೆ ತಣ್ಣೀರೆರಚಿ ಐವತ್ತನೇಯ ವಯಸ್ಸಿನಲ್ಲಿ ಅವರನ್ನು ಈ ಭೂಮಿಯಿಂದಲೇ ಕರೆದುಕೊಂಡು ಹೋಯಿತು.
ಅವರು ಹೋದರೂ ಅವರ ನೆನಪು ಮಾತ್ರ ಇನ್ನೂ ತಾಲೂಕಿನ ಕರಡಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಹಚ್ಚ ಹಸಿರಾಗಿದ್ದು,
೨೦೨೩ ನೇ ಸಾಲಿನ ವಿದ್ಯಾರ್ಥಿಗಳು ಕಾಶೀಮ ಕನಸಾವಿ ಅವರ ಪ್ರತಿಮೆಯನ್ನು ನಿರ್ಮಿಸಿ ಹುಟ್ಟು ಹಬ್ಬದ ದಿನದಂದು ಶಾಲೆಯಲ್ಲಿ ಪ್ರತಿಷ್ಠಾಪಿಸಿ
ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ ಗೌರವ ಸಲ್ಲಿಸಿದ್ದಾರೆ.ಓರ್ವ ಚಿತ್ರಕಲಾ ಕಲಾವಿದನಿಗೆ ದೊರೆತ ದೊಡ್ಡ ಸನ್ಮಾನ ಇದು ಎಂದರೆ ತಪ್ಪಾಗದು.